ಭಾವ ಬಿಂದು

Tuesday, August 29, 2006

ಸತ್ಯ-ಮಿಥ್ಯಗಳ ನಡುವೆ
ಭಾಗ - ೨

ಬೆಳಗಿನ ೯-೦೦ ಕ್ಕೆ ಸರಿಯಾಗಿ ಆಫೀಸಿಗೆ ಹೋಗಬೇಕು. ೮-೩೦ ರ ಬಸ್ ತಪ್ಪಿದರೆ ಮುಂದಿನ ಬಸ್ ಅರ್ಧ ಗಂಟೆ ಕಳೆದ ಮೇಲೆಯೇ. ಆಟೋ ಹಿಡಿದು ಒಂದಕ್ಕೆ ನಾಲ್ಕರಷ್ಟು ತೆತ್ತು ಸಮಯಕ್ಕೆ ಸರಿಯಾಗಿ ಆಫೀಸ್ ತಲುಪದಿದ್ದರೆ ಬಾಸ್‌ನ ಕೆಂಪು ಕಣ್ಣುಗಳನ್ನೆದುರಿಸಬೇಕು. ಅವನ ವಕ್ರ ಪ್ರಶ್ನೆಗಳು, ಅದಕ್ಕಿಂತ ವಕ್ರವಾದ ನಗು.

ಛೆ, ನೆನಸಿಕೊಂಡರೆ ಮೈಯೆಲ್ಲಾ ಮುಳ್ಳೆದ್ದಂತಾಗುತ್ತದೆ. ಅವನು ಮೊದಲು ಹೀಗಿರಲಿಲ್ಲ, ಕೊನೇ ಪಕ್ಷ ನನ್ನ ಮಟ್ಟಿಗಾದರೂ. ಹೆಣ್ಣಿನ ಅಸಹಾಯಕ ಪರಿಸ್ಥಿತಿಯನ್ನು ಎಷ್ಟು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಾರೆ. ಯೋಚಿಸುತ್ತಲೇ ರಘುವಿಗೆ ಸ್ನಾನಕ್ಕೆ ನೀರು ತೋಡಿ, ಬಟ್ಟೆ ರೆಡಿ ಮಾಡಿ, ತಿಂಡಿ ತಯಾರು ಮಾಡತೊಡಗಿದೆ. ಎಷ್ಟೇ ಧಾವಂತವಿದ್ದರೂ ರಘು ಕೂಗಿದ ತಕ್ಷಣ ಓಗೊಡಲೇ ಬೇಕು. ಬಟ್ಟೆ ತೊಡಿಸಲು ನನ್ನ ಸಹಾಯ ಬೇಕೇ ಬೇಕು.

ಹೌದು, ನಾವು ಮದುವೆಯಾದ ಮೂರು ವರ್ಷದ ನಂತರ ನಡೆದ ಘೋರ ಅಪಘಾತದಲ್ಲಿ ರಘು ಬಲಗಾಲನ್ನು ಕಳೆದುಕೊಂಡಿದ್ದಾರೆ. ಬಲಗೈ ಕೂಡ ಮಲ್ಟಿಪಲ್ ಫ್ರಾಕ್ಚರ್ ಆಗಿ ಆಪರೇಷನ್ ಆಗಿದೆ. ಕೆಲವು ಕೋನಗಳಲ್ಲಿ ತಿರುಗಿಸಲು ಕಷ್ಟ. ಬಾಕಿಯಂತೆ ಎಷ್ಟು ಸಾಧ್ಯವಾಗುತ್ತೋ ಅಷ್ಟು ಕೆಲಸ ಮಾಡಿಕೊಳ್ಳುತ್ತಾರೆ. ಕೆಲಸ ಹೋದ ಮೇಲೆ ಮನೇಲೆ ಕುಳಿತುಕೊಂಡು ಕೆಲವು ಕಂಪನಿಗಳ ಲೆಕ್ಕಾಚಾರ ಮಾಡಿಕೊಡುತ್ತಾರೆ. ಇದರಿಂದ ಅಷ್ಟೋ ಇಷ್ಟೋ ಸಂಪಾದನೆಯ ಜೊತೆ ಕಾಲ ಕಳೆಯುವ ಸಾಧನವೂ ಆಗಿದೆ. ಮೊದಮೊದಲಿಗೆ ಈಗೊಂದು ವರ್ಷದ ತನಕವೂ ಮನೆ ವಾತಾವರಣ ಬಿಗಡಾಯಿಸಿತ್ತು. ಶಾರೀರಿಕ ಹೀನತೆಯೊಂದಿಗೆ ಮನಸ್ಸೂ ಚೂರುಚೂರಾಗಿತ್ತು. ವಿಪರೀತ ಅಸಹನೆ ಸಿಡಿಮಿಡಿ ಕೋಪ. ಹೇಗೋ ಈಗ ಇಷ್ಟರಮಟ್ಟಿಗೆ ಆಗಿದ್ದಾರೆ.ಆದರೂ ಬೆಳಿಗ್ಗೆ ಅಷ್ಟು ಹೊತ್ತಿಗೆ ಎಲ್ಲವನ್ನೂ ಹವಣಿಸಿ, ಕುಕ್ಕರ್ ಕೂಗಿಸಿ, ಡಬ್ಬಿಗೆ ತಿಂಡಿ ಹಾಕಿಕೊಂಡು ಓಡುವಷ್ಟರಲ್ಲಿ ಸಾಕಾಗಿ ಹೋಗುತ್ತೆ.

ಪುಣ್ಯಕ್ಕೆ ಬಸ್‌ಸ್ಟಾಪ್‌ಗೆ ಬರುವಷ್ಟರಲ್ಲಿ ಬಸ್ ಬಂದಿತು. ಹದಿನೈದು, ಇಪ್ಪತ್ತು ನಿಮಿಷದ ಪ್ರಯಾಣ ಐದಾರು ನಿಮಿಷದ ನಡಿಗೆ ಮೆಟ್ಟಿಲು ಹತ್ತಿ ಹೋಗಿ ಎರಡನೇ ಅಂತಸ್ತಿನ ಆಫೀಸಿನ ತನ್ನ ಕುರ್ಚಿಯಲ್ಲಿ ಕುಳಿತುಕೊಂಡರೆ ಬೇರೆಯೇ ಪ್ರಪಂಚ ಹೊಕ್ಕ ಅನುಭವ.

ಮದ್ಯಾಹ್ನ ಊಟದ ಸಮಯದಲ್ಲಿ ತಿಂಡಿಯ ಡಬ್ಬಿ ತೆಗೆದುಕೊಂಡು ಹೊರಟಾಗ ತನ್ನ ಜೊತೆ ಕೆಲಸ ಮಾಡುವ ವನಜ ದಿನದ ಪ್ರಶ್ನೆ ಹಾಕಿದಳು. "ಏನು, ಇವತ್ತೂ ಬೆಳಿಗ್ಗೆ ತಿಂಡಿ ತಿಂದಿಲ್ಲಾ ಅನ್ಸುತ್ತೆ. ಮುಖ ನೋಡು, ಒಳ್ಳೆ ಒಣಗಿದ ಹಪ್ಪಳದ ಹಾಗೆ ಆಗಿದೆ.''

ವಾರದಲ್ಲಿ ಮೂರು ದಿನ ಬೆಳಗ್ಗೆ ತಿಂಡಿ ತಿನ್ನಲು ಆಗುವುದಿಲ್ಲ. ಎರಡು ಸಲ ಕಾಫಿ ಆಗಿರುತ್ತೆ ಅಷ್ಟೆ. ೧೨-೩೦ಗೆ ಊಟದ ಸಮಯದಲ್ಲಿ ಮೊದಲ ಉಪಹಾರ.

"ಏನು ಮಾಡೋದ್ಹೇಳು. ಬೆಳಿಗ್ಗೆ ಎಷ್ಟು ಬೇಗ ಮಾಡೋಣ ಎಂದರೂ ಗಡಿಬಿಡೀಲಿ ತಿನ್ನಲು ಪುರುಸೊತ್ತಾಗೊಲ್ಲ.''

ಡಬ್ಬಿ ಖಾಲಿ ಮಾಡುತ್ತಿದ್ದಂತೆ ವನಜ ಹೇಳಿದಳು, "ಸಂಜೆ ಆಫೀಸ್ ಮುಗಿದ ಮೇಲೆ ಸರ ರಿಪೇರಿಗೆ ಕೊಟ್ಟಿದ್ದೆನಲ್ಲಾ ತೊಗೊಂಡು ಹೋಗಬೇಕು."

ತಕ್ಷಣ ಅಲ್ಲಿಯವರೆಗೆ ಮರೆತಿದ್ದ ಸರ ನೆನಪಿಗೆ ಬಂದಿತು. ವನಜಳ ಬಳಿ ಎಲ್ಲಾ ವಿವರಿಸಿದೆ. `ಏನು ಮಾಡೋದೋ ಗೊತ್ತಾಗುತ್ತಿಲ್ಲಾ, ಎಂದೆ.

"ಒಂದು ಕೆಲಸ ಮಾಡು ಸರ ಸಿಕ್ಕಿರುವುದು ನಿಮ್ಮ ಬಡಾವಣೆಯಲ್ಲೇ ಆದ್ದರಿಂದ ಒಂದಂತೂ ಊಹಿಸಬಹುದು. ಬಹುಷಃ ಕಳೆದುಕೊಂಡವರು ನಿಮ್ಮ ಮನೆ ಸುತ್ತಮುತ್ತ ಒಂದೆರಡು ಕಿ.ಮೀ. ಆಸುಪಾಸಿನಲ್ಲೇ ಇರಬಹುದು. ಹಾಗಿದ್ದರೆ ಒಂದೆರಡು ಕಡೆ ಚೀಟಿ ಅಂಟಿಸು, ಬಸ್‌ಸ್ಟಾಪ್, ಎಸ್.ಟಿ.ಡಿ. ಬೂತ್ ಬಳಿ ಹೀಗೆ. ಅಕಸ್ಮಾತ್ ಕಳೆದುಕೊಂಡವರು ಅದನ್ನು ಗಮನಿಸಿದರೆ ನಿನ್ನನ್ನು ಸಂಪರ್ಕಿಸುತ್ತಾರೆ. ವಿಚಾರಿಸಿ ಕೊಡು. ತಡಿ ನಾನೇ ಕಂಪ್ಯೂಟರ್‌ನಲ್ಲಿ ಮಾಡಿ ಕಾಪಿ ತೆಗೆದುಕೊಡುತ್ತೇನೆ. ಏನಂತ ಮಾಡೋಣ ಹೇಳು.''

ಇಬ್ಬರೂ ಕೂಡಿ ಚರ್ಚಿಸಿ ಬರೆದೆವು. "ನಿನ್ನೆ ಅಥವಾ ಇಂದು ಬೆಳಿಗ್ಗೆ ಒಂದು ಅಮೂಲ್ಯ ವಸ್ತು ಕಳೆದು ಕೊಂಡವರು ದಯವಿಟ್ಟು ದೂರವಾಣಿ ಸಂಖ್ಯೆ ******** ಗೆ ಸಂಪರ್ಕಿಸಿ.''ಫುಲ್ ಸ್ಕೇಪ್ ಹಾಳೆಯ ಮೇಲೆ ನಾಲ್ಕು ಕಾಪಿ ತೆಗೆದುಕೊಟ್ಟಳು ವನಜ. ಗಮ್ ತೆಗೆದುಕೊಂಡು ಬಸ್ ಇಳಿಯುತ್ತಿದ್ದಂತೆಯೇ ಬಸ್‌ಸ್ಟಾಪ್ ಬಳಿ ಒಂದು ಚೀಟಿ ಅಂಟಿಸಿದೆ. ದಾರಿಯಲ್ಲಿ ಬರುತ್ತಾ ಕಂಡ ಎರಡು ಎಸ್.ಟಿ.ಡಿ. ಬೂತ್‌ಗಳ ಮುಂದೆ ಇನ್ನೆರಡು ಚೀಟಿ ಅಂಟಿಸಿದೆ. ಇನ್ನೊಂದನ್ನು ನೋಡೋಣ ಯೋಚಿಸೋಣ ಎಂದುಕೊಂಡೆ.

ಮನೆಗೆ ಬಂದು ಕಾಲು ತೊಳೆಯುವುದಕ್ಕಿಲ್ಲ, ರಘು "ಡಿಕಾಕ್ಷನ್ ಮುಗಿದು ಹೋಗಿದೆ, ಕಾಫಿ ಕುಡಿಯೋಣ ಅಂತ ಎಷ್ಟು ಹೊತ್ತಿನಿಂದ ಅನ್ನಿಸ್ತಾ ಇದೆ.''

ರಘುವಿಗೆ ದಿನಕ್ಕೆ ನಾಲ್ಕಾರು ಸಲ ಕಾಫಿ ಬೇಕು.ಸರದ ಬಗ್ಗೆ ಮಾಡಿದ್ದ ಕೆಲಸ ಹೇಳಿದೆ. ರಘು ತಕ್ಷಣ ಉತ್ತರಿಸಲಿಲ್ಲ, "ಇನ್ನು ಫೋನ್ ಮೇಲೆ ಫೋನ್ ರಿಂಗ್ ಆಗೋದು ಶುರುವಾಗುತ್ತೆ ನೆಮ್ಮದಿಯಿಂದ ಇರಕ್ಕಾಗಲ್ಲ ಅಂತ ಗೊಣಗಿದರು. ನಾನೇನೂ ಮಾತಾಡಲಿಲ್ಲ.''

ಅವತ್ತೇನೂ ಫೋನ್ ಬರಲಿಲ್ಲ. ಸರವನ್ನು ಜೋಪಾನವಾಗಿ ಬೀರುವಿನಲ್ಲಿಟ್ಟೆ. ಬೆಳಿಗ್ಗೆ ಕೆಲಸಕ್ಕೆ ಹೊರಡುವ ಮುನ್ನ ರಘುವಿಗೆ ಹೇಳಿದೆ "ರಘು, ದಯವಿಟ್ಟು ಯಾರಾದರೂ ಸರದ ಬಗ್ಗೆ ವಿಚಾರಿಸಿ ಫೋನ್ ಮಾಡಿದರೆ ಬೇಸರ ಮಾಡಿಕೊಳ್ಳದೇ ಉತ್ತರಿಸೀಪ್ಪಾ, ಮಾಂಗಲ್ಯದ ಸರ, ಎಷ್ಟು ಸೆಂಟಿಮೆಂಟ್ ಇರುತ್ತೋ, ದಯವಿಟ್ಟು ಮಾತಾಡಿ, ಸಂಜೆ ಬರಲು ತಿಳಿಸಿ.''

"ಅಷ್ಟು ಮಾಡದೇ ಇರ್‍ತೀನಾ? ನೀನು ಹೋಗ್ಬಾ, ಫೋನ್ ಬಂದರೆ ಅಟೆಂಡ್ ಮಾಡ್ತೀನಿ.''
ನೆಮ್ಮದಿಯಿಂದ ಹೊರಟೆ.
ಮುಂದುವರೆಯುವುದು...

3 Comments:

  • At 9:49 AM, Blogger bhadra said…

    ಮೇಡಂ ಓದೋದು ಕಷ್ಟ ಆಗುತ್ತಿದೆ. ಪ್ಯಾರಾ ಜಸ್ಟಿಫಿಕೇಶನ್ ಮಾಡಿರ್ಬೇಕು ಅನ್ನಿಸುತ್ತಿದೆ. ಅದನ್ನು ತೆಗೆಯಿರಿ - ಸರಿ ಹೋಗಬಹುದು.

    ಮತ್ತೆ ಬಂದು ಓದುವೆ.

     
  • At 12:38 PM, Blogger ಜಯಂತ ಬಾಬು said…

    ನನಗೆ ಬ್ಲಾಗ್ ಇದು ಅನಿಸ್ತಾನೆ ಇಲ್ಲ...ಮುಂಚೆ ಓದುತ್ತಿದ್ದ ತರಂಗ,ಸುಧಾ,ಮಯೂರದ ಲೇಖನದ ತರ ಇದೆ ...ತುಂಬ ಸೊಗಸಾಗಿದೆ

     
  • At 1:55 AM, Blogger ಮನಸ್ವಿನಿ said…

    ಮುಂದಿನ ಭಾಗ ಬೇಗ ಬರಲಿ :)

     

Post a Comment

<< Home