ಭಾವ ಬಿಂದು

Tuesday, August 29, 2006

ಸತ್ಯ-ಮಿಥ್ಯಗಳ ನಡುವೆ
ಭಾಗ - ೨

ಬೆಳಗಿನ ೯-೦೦ ಕ್ಕೆ ಸರಿಯಾಗಿ ಆಫೀಸಿಗೆ ಹೋಗಬೇಕು. ೮-೩೦ ರ ಬಸ್ ತಪ್ಪಿದರೆ ಮುಂದಿನ ಬಸ್ ಅರ್ಧ ಗಂಟೆ ಕಳೆದ ಮೇಲೆಯೇ. ಆಟೋ ಹಿಡಿದು ಒಂದಕ್ಕೆ ನಾಲ್ಕರಷ್ಟು ತೆತ್ತು ಸಮಯಕ್ಕೆ ಸರಿಯಾಗಿ ಆಫೀಸ್ ತಲುಪದಿದ್ದರೆ ಬಾಸ್‌ನ ಕೆಂಪು ಕಣ್ಣುಗಳನ್ನೆದುರಿಸಬೇಕು. ಅವನ ವಕ್ರ ಪ್ರಶ್ನೆಗಳು, ಅದಕ್ಕಿಂತ ವಕ್ರವಾದ ನಗು.

ಛೆ, ನೆನಸಿಕೊಂಡರೆ ಮೈಯೆಲ್ಲಾ ಮುಳ್ಳೆದ್ದಂತಾಗುತ್ತದೆ. ಅವನು ಮೊದಲು ಹೀಗಿರಲಿಲ್ಲ, ಕೊನೇ ಪಕ್ಷ ನನ್ನ ಮಟ್ಟಿಗಾದರೂ. ಹೆಣ್ಣಿನ ಅಸಹಾಯಕ ಪರಿಸ್ಥಿತಿಯನ್ನು ಎಷ್ಟು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಾರೆ. ಯೋಚಿಸುತ್ತಲೇ ರಘುವಿಗೆ ಸ್ನಾನಕ್ಕೆ ನೀರು ತೋಡಿ, ಬಟ್ಟೆ ರೆಡಿ ಮಾಡಿ, ತಿಂಡಿ ತಯಾರು ಮಾಡತೊಡಗಿದೆ. ಎಷ್ಟೇ ಧಾವಂತವಿದ್ದರೂ ರಘು ಕೂಗಿದ ತಕ್ಷಣ ಓಗೊಡಲೇ ಬೇಕು. ಬಟ್ಟೆ ತೊಡಿಸಲು ನನ್ನ ಸಹಾಯ ಬೇಕೇ ಬೇಕು.

ಹೌದು, ನಾವು ಮದುವೆಯಾದ ಮೂರು ವರ್ಷದ ನಂತರ ನಡೆದ ಘೋರ ಅಪಘಾತದಲ್ಲಿ ರಘು ಬಲಗಾಲನ್ನು ಕಳೆದುಕೊಂಡಿದ್ದಾರೆ. ಬಲಗೈ ಕೂಡ ಮಲ್ಟಿಪಲ್ ಫ್ರಾಕ್ಚರ್ ಆಗಿ ಆಪರೇಷನ್ ಆಗಿದೆ. ಕೆಲವು ಕೋನಗಳಲ್ಲಿ ತಿರುಗಿಸಲು ಕಷ್ಟ. ಬಾಕಿಯಂತೆ ಎಷ್ಟು ಸಾಧ್ಯವಾಗುತ್ತೋ ಅಷ್ಟು ಕೆಲಸ ಮಾಡಿಕೊಳ್ಳುತ್ತಾರೆ. ಕೆಲಸ ಹೋದ ಮೇಲೆ ಮನೇಲೆ ಕುಳಿತುಕೊಂಡು ಕೆಲವು ಕಂಪನಿಗಳ ಲೆಕ್ಕಾಚಾರ ಮಾಡಿಕೊಡುತ್ತಾರೆ. ಇದರಿಂದ ಅಷ್ಟೋ ಇಷ್ಟೋ ಸಂಪಾದನೆಯ ಜೊತೆ ಕಾಲ ಕಳೆಯುವ ಸಾಧನವೂ ಆಗಿದೆ. ಮೊದಮೊದಲಿಗೆ ಈಗೊಂದು ವರ್ಷದ ತನಕವೂ ಮನೆ ವಾತಾವರಣ ಬಿಗಡಾಯಿಸಿತ್ತು. ಶಾರೀರಿಕ ಹೀನತೆಯೊಂದಿಗೆ ಮನಸ್ಸೂ ಚೂರುಚೂರಾಗಿತ್ತು. ವಿಪರೀತ ಅಸಹನೆ ಸಿಡಿಮಿಡಿ ಕೋಪ. ಹೇಗೋ ಈಗ ಇಷ್ಟರಮಟ್ಟಿಗೆ ಆಗಿದ್ದಾರೆ.ಆದರೂ ಬೆಳಿಗ್ಗೆ ಅಷ್ಟು ಹೊತ್ತಿಗೆ ಎಲ್ಲವನ್ನೂ ಹವಣಿಸಿ, ಕುಕ್ಕರ್ ಕೂಗಿಸಿ, ಡಬ್ಬಿಗೆ ತಿಂಡಿ ಹಾಕಿಕೊಂಡು ಓಡುವಷ್ಟರಲ್ಲಿ ಸಾಕಾಗಿ ಹೋಗುತ್ತೆ.

ಪುಣ್ಯಕ್ಕೆ ಬಸ್‌ಸ್ಟಾಪ್‌ಗೆ ಬರುವಷ್ಟರಲ್ಲಿ ಬಸ್ ಬಂದಿತು. ಹದಿನೈದು, ಇಪ್ಪತ್ತು ನಿಮಿಷದ ಪ್ರಯಾಣ ಐದಾರು ನಿಮಿಷದ ನಡಿಗೆ ಮೆಟ್ಟಿಲು ಹತ್ತಿ ಹೋಗಿ ಎರಡನೇ ಅಂತಸ್ತಿನ ಆಫೀಸಿನ ತನ್ನ ಕುರ್ಚಿಯಲ್ಲಿ ಕುಳಿತುಕೊಂಡರೆ ಬೇರೆಯೇ ಪ್ರಪಂಚ ಹೊಕ್ಕ ಅನುಭವ.

ಮದ್ಯಾಹ್ನ ಊಟದ ಸಮಯದಲ್ಲಿ ತಿಂಡಿಯ ಡಬ್ಬಿ ತೆಗೆದುಕೊಂಡು ಹೊರಟಾಗ ತನ್ನ ಜೊತೆ ಕೆಲಸ ಮಾಡುವ ವನಜ ದಿನದ ಪ್ರಶ್ನೆ ಹಾಕಿದಳು. "ಏನು, ಇವತ್ತೂ ಬೆಳಿಗ್ಗೆ ತಿಂಡಿ ತಿಂದಿಲ್ಲಾ ಅನ್ಸುತ್ತೆ. ಮುಖ ನೋಡು, ಒಳ್ಳೆ ಒಣಗಿದ ಹಪ್ಪಳದ ಹಾಗೆ ಆಗಿದೆ.''

ವಾರದಲ್ಲಿ ಮೂರು ದಿನ ಬೆಳಗ್ಗೆ ತಿಂಡಿ ತಿನ್ನಲು ಆಗುವುದಿಲ್ಲ. ಎರಡು ಸಲ ಕಾಫಿ ಆಗಿರುತ್ತೆ ಅಷ್ಟೆ. ೧೨-೩೦ಗೆ ಊಟದ ಸಮಯದಲ್ಲಿ ಮೊದಲ ಉಪಹಾರ.

"ಏನು ಮಾಡೋದ್ಹೇಳು. ಬೆಳಿಗ್ಗೆ ಎಷ್ಟು ಬೇಗ ಮಾಡೋಣ ಎಂದರೂ ಗಡಿಬಿಡೀಲಿ ತಿನ್ನಲು ಪುರುಸೊತ್ತಾಗೊಲ್ಲ.''

ಡಬ್ಬಿ ಖಾಲಿ ಮಾಡುತ್ತಿದ್ದಂತೆ ವನಜ ಹೇಳಿದಳು, "ಸಂಜೆ ಆಫೀಸ್ ಮುಗಿದ ಮೇಲೆ ಸರ ರಿಪೇರಿಗೆ ಕೊಟ್ಟಿದ್ದೆನಲ್ಲಾ ತೊಗೊಂಡು ಹೋಗಬೇಕು."

ತಕ್ಷಣ ಅಲ್ಲಿಯವರೆಗೆ ಮರೆತಿದ್ದ ಸರ ನೆನಪಿಗೆ ಬಂದಿತು. ವನಜಳ ಬಳಿ ಎಲ್ಲಾ ವಿವರಿಸಿದೆ. `ಏನು ಮಾಡೋದೋ ಗೊತ್ತಾಗುತ್ತಿಲ್ಲಾ, ಎಂದೆ.

"ಒಂದು ಕೆಲಸ ಮಾಡು ಸರ ಸಿಕ್ಕಿರುವುದು ನಿಮ್ಮ ಬಡಾವಣೆಯಲ್ಲೇ ಆದ್ದರಿಂದ ಒಂದಂತೂ ಊಹಿಸಬಹುದು. ಬಹುಷಃ ಕಳೆದುಕೊಂಡವರು ನಿಮ್ಮ ಮನೆ ಸುತ್ತಮುತ್ತ ಒಂದೆರಡು ಕಿ.ಮೀ. ಆಸುಪಾಸಿನಲ್ಲೇ ಇರಬಹುದು. ಹಾಗಿದ್ದರೆ ಒಂದೆರಡು ಕಡೆ ಚೀಟಿ ಅಂಟಿಸು, ಬಸ್‌ಸ್ಟಾಪ್, ಎಸ್.ಟಿ.ಡಿ. ಬೂತ್ ಬಳಿ ಹೀಗೆ. ಅಕಸ್ಮಾತ್ ಕಳೆದುಕೊಂಡವರು ಅದನ್ನು ಗಮನಿಸಿದರೆ ನಿನ್ನನ್ನು ಸಂಪರ್ಕಿಸುತ್ತಾರೆ. ವಿಚಾರಿಸಿ ಕೊಡು. ತಡಿ ನಾನೇ ಕಂಪ್ಯೂಟರ್‌ನಲ್ಲಿ ಮಾಡಿ ಕಾಪಿ ತೆಗೆದುಕೊಡುತ್ತೇನೆ. ಏನಂತ ಮಾಡೋಣ ಹೇಳು.''

ಇಬ್ಬರೂ ಕೂಡಿ ಚರ್ಚಿಸಿ ಬರೆದೆವು. "ನಿನ್ನೆ ಅಥವಾ ಇಂದು ಬೆಳಿಗ್ಗೆ ಒಂದು ಅಮೂಲ್ಯ ವಸ್ತು ಕಳೆದು ಕೊಂಡವರು ದಯವಿಟ್ಟು ದೂರವಾಣಿ ಸಂಖ್ಯೆ ******** ಗೆ ಸಂಪರ್ಕಿಸಿ.''ಫುಲ್ ಸ್ಕೇಪ್ ಹಾಳೆಯ ಮೇಲೆ ನಾಲ್ಕು ಕಾಪಿ ತೆಗೆದುಕೊಟ್ಟಳು ವನಜ. ಗಮ್ ತೆಗೆದುಕೊಂಡು ಬಸ್ ಇಳಿಯುತ್ತಿದ್ದಂತೆಯೇ ಬಸ್‌ಸ್ಟಾಪ್ ಬಳಿ ಒಂದು ಚೀಟಿ ಅಂಟಿಸಿದೆ. ದಾರಿಯಲ್ಲಿ ಬರುತ್ತಾ ಕಂಡ ಎರಡು ಎಸ್.ಟಿ.ಡಿ. ಬೂತ್‌ಗಳ ಮುಂದೆ ಇನ್ನೆರಡು ಚೀಟಿ ಅಂಟಿಸಿದೆ. ಇನ್ನೊಂದನ್ನು ನೋಡೋಣ ಯೋಚಿಸೋಣ ಎಂದುಕೊಂಡೆ.

ಮನೆಗೆ ಬಂದು ಕಾಲು ತೊಳೆಯುವುದಕ್ಕಿಲ್ಲ, ರಘು "ಡಿಕಾಕ್ಷನ್ ಮುಗಿದು ಹೋಗಿದೆ, ಕಾಫಿ ಕುಡಿಯೋಣ ಅಂತ ಎಷ್ಟು ಹೊತ್ತಿನಿಂದ ಅನ್ನಿಸ್ತಾ ಇದೆ.''

ರಘುವಿಗೆ ದಿನಕ್ಕೆ ನಾಲ್ಕಾರು ಸಲ ಕಾಫಿ ಬೇಕು.ಸರದ ಬಗ್ಗೆ ಮಾಡಿದ್ದ ಕೆಲಸ ಹೇಳಿದೆ. ರಘು ತಕ್ಷಣ ಉತ್ತರಿಸಲಿಲ್ಲ, "ಇನ್ನು ಫೋನ್ ಮೇಲೆ ಫೋನ್ ರಿಂಗ್ ಆಗೋದು ಶುರುವಾಗುತ್ತೆ ನೆಮ್ಮದಿಯಿಂದ ಇರಕ್ಕಾಗಲ್ಲ ಅಂತ ಗೊಣಗಿದರು. ನಾನೇನೂ ಮಾತಾಡಲಿಲ್ಲ.''

ಅವತ್ತೇನೂ ಫೋನ್ ಬರಲಿಲ್ಲ. ಸರವನ್ನು ಜೋಪಾನವಾಗಿ ಬೀರುವಿನಲ್ಲಿಟ್ಟೆ. ಬೆಳಿಗ್ಗೆ ಕೆಲಸಕ್ಕೆ ಹೊರಡುವ ಮುನ್ನ ರಘುವಿಗೆ ಹೇಳಿದೆ "ರಘು, ದಯವಿಟ್ಟು ಯಾರಾದರೂ ಸರದ ಬಗ್ಗೆ ವಿಚಾರಿಸಿ ಫೋನ್ ಮಾಡಿದರೆ ಬೇಸರ ಮಾಡಿಕೊಳ್ಳದೇ ಉತ್ತರಿಸೀಪ್ಪಾ, ಮಾಂಗಲ್ಯದ ಸರ, ಎಷ್ಟು ಸೆಂಟಿಮೆಂಟ್ ಇರುತ್ತೋ, ದಯವಿಟ್ಟು ಮಾತಾಡಿ, ಸಂಜೆ ಬರಲು ತಿಳಿಸಿ.''

"ಅಷ್ಟು ಮಾಡದೇ ಇರ್‍ತೀನಾ? ನೀನು ಹೋಗ್ಬಾ, ಫೋನ್ ಬಂದರೆ ಅಟೆಂಡ್ ಮಾಡ್ತೀನಿ.''
ನೆಮ್ಮದಿಯಿಂದ ಹೊರಟೆ.
ಮುಂದುವರೆಯುವುದು...

Saturday, August 26, 2006

ಸತ್ಯ-ಮಿಥ್ಯಗಳ ನಡುವೆ
ಭಾಗ - ೧

ನಡೆಯುತ್ತಿದ್ದವಳ ಕಾಲಿಗೆ ತೊಡರಿದ್ದೇನೆಂದು ಬಗ್ಗಿ ನೋಡಿದೆ. ಚಪ್ಪಲಿಯ ಮುಂಭಾಗದ ಮೇಲೆ ಬೆರಳುಗಳ ಮುಂದೆ ಸರ ಸಿಕ್ಕಿಹಾಕಿಕೊಂಡಿತ್ತು. ಬಗ್ಗಿ ಚಪ್ಪಲಿಯಿಂದ ಬಿಡಿಸಿನೋಡಿದರೆ, ಮಣ್ಣಿನಲ್ಲಿ ಹೂತಿದ್ದ ಮಾಂಗಲ್ಯದ ಸಮೇತ ಕೈಗೆ ಸರ ಬಂತು. ಒಂದು ಕ್ಷಣ ಅಕ್ಕಪಕ್ಕ ನೋಡಿದೆ. ತೀರ ಸನಿಹದಲ್ಲಿ ಯಾರೂ ಇರಲಿಲ್ಲ. ಬೆಳಗಿನ ಐದೂವರೆಯ ಸಮಯ. ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ಬೆಳಗಿನ ವಾಕಿಂಗಿಗೆ ಹೊರಟವರು, ಸೈಕಲ್ ಮೇಲಿನ ಪೇಪರಿನ ಹುಡುಗರು ಬಿಟ್ಟರೆ ರಸ್ತೆ ಪ್ರಶಾಂತವಾಗಿತ್ತು.

ಕೈಯಲ್ಲಿ ಸರ ಇತ್ತು. ಅದಕ್ಕಂಟಿದ್ದ ಮಣ್ಣು ಕೊಡವಿ, ಒಂದು ಕ್ಷಣ ಏನು ಮಾಡುವುದೆಂದು ಯೋಚಿಸಿದೆ. ಯಾರದೋ ಏನೋ, ಕಳೆದುಕೊಂಡವರು ಎಷ್ಟು ಬೇಸರ ಮಾಡಿಕೊಂಡಿರಬಹುದೋ? ತೀರ ನಮ್ಮಂತಹ ಮಧ್ಯಮ ವರ್ಗದವರಾದರೆ ಎಷ್ಟು ಕಣ್ಣೀರಿಡುತ್ತಿರಬಹುದು?

ಆದರೆ ಈಗಿನ್ನೂ ಬೆಳಗಿನ ಆರು ಗಂಟೆಯೂ ಆಗಿಲ್ಲ. ಕಳೆದುಕೊಂಡವರೂ ಸಹ ಬೆಳಗಿನ ವಾಕಿಂಗಿಗೇ ಬಂದಿರಬಹುದು ಇಲ್ಲಾ ರಾತ್ರಿ ಜನ ಸಂಚಾರ ಕಡಿಮೆಯಾದಮೇಲೆ ಬೀಳಿಸಿಕೋಡಿರಬಹುದು.

ಸರವನ್ನು ಕೈಲಿ ಹಿಡಿದುಕೊಂಡೇ ನಿಧಾನವಾಗಿ ನಡೆಯಲಾರಂಭಿಸಿದೆ. ಅಕಸ್ಮಾತ್ ಬೆಳಿಗ್ಗೆಯೇ ಬೀಳಿಸಿಕೊಂಡಿದ್ದರೆ, ಇಷ್ಟರಲ್ಲಿ ಆಕೆಗೆ ಗೊತ್ತಾಗಿ ಇದೇ ದಾರಿಯಲ್ಲೇನಾದರೂ ಹುಡುಕುತ್ತಿದ್ದರೆ ಅಂತಹವರು ಕಣ್ಣಿಗೆ ಬಿದ್ದರೂ ಬೀಳಬಹುದು ಎಂದು ಕೊಂಡು ಮತ್ತೆ ಮತ್ತೆ ಹಿಂದಿರುಗಿ ನೋಡುತ್ತಾ ಬಂದರೆ, ಮನೆ ಹತ್ತಿರ ಬಂದರೂ ಅಂತಹವರು ‍ಯಾರೂ ಕಾಣಿಸಲಿಲ್ಲ.

ಬೀಗ ತೆರೆದುಕೊಂಡು ಒಳಬಂದರೆ ಗಡಿಯಾರ ಆರು ಗಂಟೆ ತೋರಿಸಿತ್ತಿದೆ. ಗಂಡ ಇನ್ನೂ ಮಲಗಿರುತ್ತಾರೆ. ಕೈಕಾಲಿನ ಜೊತೆ ಮಣ್ಣಾಗಿದ್ದ ಸರವನ್ನು ಚೆನ್ನಾಗಿ ತೊಳೆದು ಕಪಾಟಿನ ಮೇಲಿರಿಸಿ ಸೀದಾ ಅಡಿಗೆಮನೆಗೆ ನಡೆದು ಕಾಫಿ ಬೆರೆಸಿ ಎರಡು ಲೋಟಕ್ಕೆ ಬಗ್ಗಿಸಿ ತಂದು ರಘುವನ್ನೆಬ್ಬಿಸಿದೆ.

"ಆಗಲೇ ಬೆಳಗಾಯಿತಾ? ಗಂಟೆ ಎಷ್ಟು?''

"ಆರೂ ಕಾಲು, ಕಾಫಿ ತೊಗೊಳ್ಳಿ.''

"ಇನ್ನೂ ಪೇಪರ್ ಬಂದಿಲ್ಲವಾ?''

"ಇನ್ನೂ ಇಲ್ಲ.''

ಅಪಘಾತದ ನಂತರ ನಮ್ಮ ಸಂಭಾಷಣೆ ಹೀಗೇ ಯಾಂತ್ರಿಕವಾಗಿರುತ್ತೆ.

ಕಾಫಿ ಕುಡಿದ ನಂತರ ಕಪಾಟಿನ ಮೇಲಿಟ್ಟಿದ್ದ ಸರ ತಂದು ರಘುವಿಗೆ ತೋರಿಸಿದೆ.
"ಇದ್ಯಾರದು ಸರ?''
"ಬೆಳಿಗ್ಗೆ ವಾಕಿಂಗಿಗೆ ಹೋದಾಗ ಸಿಕ್ಕಿತು. ಕಾಲಿಗೆ ತೊಡರಿತು, ನೋಡಿದ್ರೆ ಮಾಂಗಲ್ಯದ ಸರ, ಯಾರದ್ದೋ, ಏನೋ?''
"ಒಳ್ಳೆ ತೂಕವಾಗಿದೆ, ನಲವತ್ತು ಗ್ರಾಂ ಆದರೂ ಇದೆ'' ಕೈಯಲ್ಲಿ ತೂಗಿಸುತ್ತಾ ಹೇಳಿದರು.
"ನಾನೂ ಆಕಡೆ ಈಕಡೆ ನೋಡುತ್ತಲೇ ಬಂದೆ, ಯಾರಾದರೂ ಹುಡುಕುತ್ತಾ ಬರಬಹುದೇನೋ ಎಂದು. ಯಾರೂ ಬರಲಿಲ್ಲ. ನನಗೂ ಸಮಯವಾಯಿತು ಬಂದುಬಿಟ್ಟೆ, ಈಗೇನು ಮಾಡೋದು?''

"ಏನು ಮಾಡ್ತೀಯಾ?''

ಸರ ತೂಗಿಸುತ್ತಲೇ ರಘು ಕೇಳಿದಾಗ ಅವರ ಮನಸ್ಸಿನಲ್ಲೇನಿದೆ ಎಂದು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿರಲಿಲ್ಲ. "ಮಾಡೋದೇನು? ಹೇಗಾದರೂ ಇದನ್ನು ಕಳೆದುಕೊಂಡವರನ್ನು ಕಂಡುಹಿಡಿಯಬೇಕು.''

"ಹೇಗೆ ಕಂಡ್ಹಿಡೀತಿಯಾ? ನನ್ನದೇ ಅಂತ ಯಾರ್‍ಯಾರೋ ಬರಬಹುದು. ಸುಮ್ಮನೆ ತಲೆ ನೋವು, ಇರೋ ತಲೆ ನೋವು ಸಾಲದೂ ಅಂತ ಇದನ್ನು ಬೇರೆ ಅಂಟಿಸಿಕೊಂಡೆ.''

"ಅಂದ್ರೇನು ಮಾಡಬೇಕಿತ್ತು? ಸರ ಅಲ್ಲೇ ಇರಲಿ ಅಂತ ಬಿಟ್ಬರಬೇಕಿತ್ತೇನು?''
"ಮತ್ತೇನು ಮಾಡ್ತೀ, ಪೋಲೀಸ್ ಗೀಲೀಸ್ ಅಂತ ಹೋದ್ರೆ ಸುಮ್ನೆ ರಾಮಾಯ್ಣ.''
"ನೋಡೋಣ ನಾನೇ ಏನಾದ್ರೂ ಯೋಚಿಸ್ತೀನಿ, ಅದ್ರ ಬಗ್ಗೆ ತಲೆ ಕೆಡಿಸಿಕೊಳ್ತಾ ಕೂರೋಕ್ಕೆ ಈಗ ಟೈಮಿಲ್ಲಾ, ನೀವು ಸ್ವಲ್ಪ ಬೇಗ ಬೇಗ ಸಹಾಯ ಮಾಡಿದ್ರೆ ಟೈಮಿಗೆ ಸರಿಯಾಗಿ ಆಫೀಸಿಗೆ ಹೋಗಬಹುದು.''
ಮುಂದುವರೆಯುವುದು.....

Wednesday, August 23, 2006

ಜ್ಯಾಮಿತಿ

(ತರಂಗ ೨೮ನೇ ನವೆಂಬರ್ ೨೦೦೨ರ ಸಂಚಿಕೆಯಲ್ಲಿ ಪ್ರಕಟಿತ.)
ಬದುಕು,
ಒಮ್ಮೊಮ್ಮೆ ವೃತ್ತ,
ಬಿಂದು, ತ್ರಿಜ್ಯ, ತ್ರಿಕೋನಗಳ ಜ್ಯಾಮಿತಿ.
ವೃತ್ತದೊಳಗೊಂದು ವೃತ್ತದೊಳಗೊಂದು
ವೃತ್ತದೊಳಗೊಂದು - ಹೀಗೇ,
ಒಂದಕ್ಕೊಂದು ಬೆಸೆದೂ,
ಒಂದರಿಂದೊಂದು ಸ್ವತಂತ್ರ.
ಅಂಟಿಯೂ ಅಂಟದಿಹ
ಅಸ್ತಿತ್ವ ಪರಿಧಿ !
ಚಿತ್ರ ವಿಚಿತ್ರ ಗೆರೆಗಳ ಸಮೂಹ.
ಹೀಗೊಂದು ಗೆರೆ,
ಹಾಗೊಂದು ಗೆರೆ
ಎರಡೂ ಬೆರೆತು ಕೋನ !
ಅದರದೊಂದು ಸ್ವರೂಪ.
ಕೆಲವೊಂದು ರೇಖೆಗಳು
ಸಮಾನಾಂತರ!
ಯಾವೊಂದು ನೆಲೆಯಲೂ ಅ-ದೂರವೆ !

Tuesday, August 15, 2006

ಮನಸು

ಎಷ್ಟು ಆಯಾಮಗಳೋ
ಈ ಹುಚ್ಚು ಮನಸಿಗೆ.
ಒಮ್ಮೆ ನಗು, ಒಮ್ಮೆ ಅಳು,
ಕಡು ಬೇಸರವೊಮ್ಮೆ,
ಹರ್ಷದ್ಹೊಳೆಯ ಚಿಲುಮೆ.
ಅಚ್ಚರಿಯ ವೈಪರೀತ್ಯ,
ಕ್ಷಣ ಚಿತ್ತ ಕ್ಷಣ ಪಿತ್ಥ,
ಗೌಜು ಗದ್ದಲದ ನಡುವೆ
ಕಾಡೋ ಒಂಟಿಬಡುಕತನ.
ಆದರದು ಶಾಶ್ವತವಲ್ಲ,
ಕ್ಷಣ ಕಳೆದರೆ ಮತ್ತೆ,
ಸಂತಸ ಚಿಮ್ಮುತ್ತೆ.
ಏನೀ ಮನಸಿನ ಪರಿ?
ಕೈಗೆಟುಕದ ಕಳ್ಳನೇ ಸರಿ.
ಲೋಕಗಳ ಜೈಸಿದ್ದ ಧೀರರೆಷ್ಟೋ ಮಂದಿ,
ಮನ ಮರ್ಕಟದೆದುರು ಚಿಂದಿ.
ಏನೀ ಮನಸಿನ ಲೀಲೆ?
ಯೋಚನೆಗಳ ಸರಮಾಲೆ.
ಬಿಡುವಿರದೆ ದಡಕೆ ಬಡಿವ
ಕಡಲಲೆಗಳಂತೆ.

(ತರಂಗ ವಾರಪತ್ರಿಕೆಯಲ್ಲಿ ಪ್ರಕಟಿತ)

ಪ್ರಶ್ನೆ

ಮನದೊಳಗೆ ಮೂಡಿ ನವಿರಾದ ಕಾವ್ಯ
ಕ್ಷಣ ಕಳೆವುದರೊಳಗೆ ಗೋಜಲು
ಬರಿ ಶಬ್ದಗಳ ತಾಕಲಾಟ, ಅರ್ಥವಾಗದೆ ಜಟಿಲ.
ಏಕೆ ಹೀಗೆ? ಬರಿಯ ಪ್ರಶ್ನೆ!

ಅಂದೆಂದೋ ತಂಗಾಳಿಗೆದುರಾಗಿ ಕುಳಿತಂದು,
ನೂರು ಭಾವಗಳ ಮೂಡಿಸಿದ ಚಂದ್ರ !
ಇಂದು ಭಾವಚಂದ್ರನ ಮೇಲೆ ಮುಸುಗೆಳೆದ ಮೋಡ.
ಏಕೆ ಹೀಗೆ? ನಿರ್ಭಾವ- ? ಮನ ಪ್ರಶ್ನಿಸುತ್ತಿದೆ, ನಿರುತ್ತರ.

ಮುಂಜಾವಿನ ಹಕ್ಕಿಗಳ ಚಿಲಿಪಿಲಿಗಳಂತೆ
ಚಟಪಟನೆ ಬಂದ ನೂರು ಭಾವ!
ಹೋಯಿತೆಲ್ಲಿಗೆ? ಪ್ರಶ್ನಿಸುತ್ತಿದೆ ಮನ.
ಬರಿ ಗಲಿಬಿಲಿ! ನಿರುತ್ತರ.